ಶ್ರೀಲಕ್ಷ್ಮೀಶೋಭನ
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ 
ಶೋಭಾನವೆನ್ನಿ ಸುಗುಣನಿಗೆ 
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ 
ಶೋಭಾನವೆನ್ನಿ ಸುರಪ್ರಿಯಗೆ	॥ ಶೋಭಾನೆ ॥
ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ 
ಪಕ್ಷಿವಾಹನ್ನಗೆರಗುವೆ 
ಪಕ್ಷಿವಾಹನ್ನಗೆರಗುವೆ ಅನುದಿನ 
ರಕ್ಷಿಸಲಿ ನಮ್ಮ ವಧೂವರರ ॥ ಶೋಭಾನೆ ॥	॥ 1 ॥
ಪಾಲಸಾಗರವನ್ನು ಲೀಲೆಯಲಿ ಕಡೆಯಲು 
ಬಾಲೆ ಮಹಲಕ್ಷುಮಿ ಉದಿಸಿದಳು 
ಬಾಲೆ ಮಹಲಕ್ಷುಮಿ ಉದಿಸಿದಳಾದೇವಿ 
ಪಾಲಿಸಲಿ ನಮ್ಮ ವಧೂವರರ ॥ ಶೋಭಾನೆ ॥	॥ 2 ॥
ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ 
ಸುಮ್ಮನೆಯಾಗಿ ಮಲಗಿಪ್ಪ 
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ 
ಜನ್ಮವೆಂಬುದು ಅವತಾರ ॥ ಶೋಭಾನೆ ॥	॥ 3 ॥
ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ 
ಅಂಬುಜವೆರಡು ಕರಯುಗದಿ 
ಅಂಬುಜವೆರಡು ಕರಯುಗದಿ ಧರಿಸಿ ಪೀ- 
ತಾಂಬರವುಟ್ಟು ಮೆರೆದಳು	॥ 4 ॥
ಒಂದು ಕರದಿಂದ ಅಭಯವನೀವಳೆ ಮ- 
ತ್ತೊಂದು ಕೈಯಿಂದ ವರಗಳ 
ಕುಂದಿಲ್ಲದಾನಂದಸಂದೋಹ ಉಣಿಸುವ 
ಇಂದಿರೆ ನಮ್ಮ ಸಲಹಲಿ	॥ 5 ॥
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು 
ನಲಿವ ಕಾಲಂದುಗೆ ಘಲುಕೆನಲು 
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮೀ
ಸಲಹಲಿ ನಮ್ಮ ವಧೂವರರ	॥ 6 ॥ 
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ 
ಚೆನ್ನೆ ಮಹಲಕ್ಷುಮಿ ಧರಿಸಿದಳೆ 
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ 
ಮನ್ನೆಯ ವಧೂವರರ ಸಲಹಲಿ ॥	 7 ॥
ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು 
ತುಂಬಿಗುರುಳ ಮುಖಕಮಲ 
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ- 
ದಂಬೆ ವಧೂವರರ ಸಲಹಲಿ ॥ 8 ॥
ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ 
ಕಸ್ತೂರಿತಿಲಕ ಧರಿಸಿದಳೆ 
ಕಸ್ತೂರಿತಿಲಕ ಧರಿಸಿದಳಾ ದೇವಿ ಸ- 
ರ್ವತ್ರ ವಧೂವರರ ಸಲಹಲಿ ॥	॥ 9 ॥
ಅಂಬುಜನಯನಗಳ ಬಿಂಬಾಧರದ ಶಶಿ 
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ 
ಉಂಬುದಕೀಯಲಿ ವಧೂವರರ್ಗೆ	॥ 10 ॥
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ 
ನೆತ್ತಿಯ ಮೇಲೆ ಧರಿಸಿದಳೆ 
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ 
ಭಕ್ತಿಯ ಜನರ ಸಲಹಲಿ	॥ 11 ॥
ಕುಂದಮಂದಾರ ಜಾಜಿಕುಸುಮಗಳ ವೃಂದವ 
ಚೆಂದದ ತುರುಬಿಲಿ ತುರುಬಿದಳೆ 
ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ- 
ಯಿಂದ ವಧೂವರರ ಸಲಹಲಿ	॥ 12 ॥
ಎಂದೆಂದೂ ಬಾಡದ ಅರವಿಂದಮಾಲೆಯ 
ಇಂದಿರೆ ಪೊಳೆವ ಕೊರಳಲ್ಲಿ 
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ	॥ 13 ॥
ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ  
ಭಾವೆ ಮಹಲಕ್ಷುಮಿ ಧರಿಸಿದಳೆ 
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ 
ಸೇವಕಜನರ ಸಲಹಲಿ	॥ 14 ॥
ಈ ಲಕ್ಷುಮಿದೇವಿಯ ಕಾಲುಂಗುರ ಘಲುಕೆನಲು 
ಲೋಲಾಕ್ಷಿ ಮೆಲ್ಲನೆ ನಡೆತಂದಳು 
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು 
ಆಲೋಚಿಸಿದಳು ಮನದಲ್ಲಿ	॥ 15 ॥
ತನ್ನ ಮಕ್ಕಳ ಕುಂದ ತಾನೆ ಪೇಳುವುದಕ್ಕೆ 
ಮನ್ನದಿ ನಾಚಿ ಮಹಲಕ್ಷುಮಿ 
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ 
ಉನ್ನಂತ ದೋಷಗಳನೆಣಿಸಿದಳು	॥ 16 ॥
ಕೆಲವರು ತಲೆಯೂರಿ ತಪಗೈದು ಪುಣ್ಯವ 
ಗಳಿಸಿದ್ದರೇನೂ ಫಲವಿಲ್ಲ 
ಜ್ವಲಿಸುವ ಕೋಪದಿ ಶಾಪವ ಕೊಡುವರು 
ಲಲನೆಯನಿವರು ಒಲಿಸುವರೆ?	॥ 17 ॥
ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ 
ಕಲ್ಲಿಸಿ ಕೊಡುವ ಗುರುಗಳು 
ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು 
ಸಲ್ಲದ ಪುರೋಹಿತಕ್ಕೊಳಗಾದರು	॥ 18 ॥
ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ 
ಭಾಮಿನಿಯ ಹಿಂದೆ ಹಾರಿದವ ॥
ಕಾಮಾಂಧನಾಗಿ ಮುನಿಯ ಕಾಮಿನಿಗೈದಿದನೊಬ್ಬ 
ಕಾಮದಿ ಗುರುತಲ್ಪಗಾಮಿಯೊಬ್ಬ	॥ 19 ॥
ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ 
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅ-
ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ	॥ 20 ॥
ಮಾವನ ಕೊಂದೊಬ್ಬ ಮರುಳಾಗಿಹನು ಗಡ 
ಹಾರ್ವನ ಕೊಂದೊಬ್ಬ ಬಳಲಿದ 
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ 
ಶಿವನಿಂದೊಬ್ಬ ಬಯಲಾದ	॥ 21 ॥
ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ 
ಅಮ್ಮಮ್ಮ ತಕ್ಕ ಗುಣವಿಲ್ಲ 
ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ 
ಮರ್ಮವ ಮೆಟ್ಟಿ ಕೊಲಿಸುವ	॥ 22 ॥
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ 
ಬಲ್ಲಿದಗಂಜಿ ಬರಿಗೈದ 
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳತಳಕ್ಕೆ ಇಳಿದ ಗಡ !	॥ 23 ॥
ಎಲ್ಲರಾಯುಷ್ಯವ ಶಿಂಶುಮಾರದೇವ 
ಸಲ್ಲೀಲೆಯಿಂದ ತೊಲಗಿಸುವ 
ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು 
ಬಲ್ಲವರೆನ್ನ ಭಜಿಸುವರು	॥ 24 ॥
ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ 
ವಿಕೃತಿಗೊಳಗಾಗಿ ಭವದಲ್ಲಿ 
ಸುಖದುಃಖವುಂಬ ಬೊಮ್ಮಾದಿ ಜೀವರು 
ದುಃಖಕೆ ದೂರಳೆನಿಪ ಎನಗೆಣೆಯೆ	॥ 25 ॥
ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ 
ಒಬ್ಬನವನಿಗೆ ಶಯನಾಹ 
ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ 
ಅಬ್ಬರದಲಾವಾಗ ಸುಳಿವರು	॥ 26 ॥
ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ 
ಸರ್ಬರಿಗಾವ ಅಮೃತವ 
ಸರ್ಬರಿಗಾವ ಅಮೃತವನುಣಿಸುವ ಅವ- 
ನೊಬ್ಬನೆ ನಿರನಿಷ್ಟ ನಿರವದ್ಯ	॥ 27 ॥
ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ 
ಒರೆದು ನೋಡಲು ನರಹರಿಗೆ 
ನರಕಯಾತನೆ ಸಲ್ಲ ದುರಿತಾತಿದೂರನಿಗೆ 
ಮರುಳ ಮನ ಬಂದಂತೆ ನುಡಿಯದಿರು	॥ 28 ॥
ಒಂದೊಂದು ಗುಣಗಳು ಇದ್ದಾವು ಇವರಲ್ಲಿ 
ಸಂದಣಿಸಿವೆ ಬಹು ದೋಷ 
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು 
ಇಂದಿರೆ ಪತಿಯ ನೆನೆದಳು	॥ 29 ॥
ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು 
ತೀವಿರ್ದ ಹರಿಗೆ ದುರಿತವ 
ಭಾವಜ್ಞರೆಂಬರೆ ಆಲದೆಲೆಯ ಮೇಲೆ 
ಶಿವನ ಲಿಂಗವ ನಿಲಿಸುವರೆ	॥ 30 ॥
ಹಸಿ-ತೃಷೆ-ಜರೆ-ಮರಣ ರೋಗರುಜಿನಗಳೆಂಬ 
ಅಸುರಪಿಶಾಚಿಗಳ ಭಯವೆಂಬ 
ವ್ಯಸನ ಬರಬಾರದು ಎಂಬ ನಾರಾಯಣಗೆ 
ಪಶು ಮೊದಲಾಗಿ ನೆನೆಯದು	॥ 31 ॥
ತಾ ದುಃಖಿಯಾದರೆ ಸುರರ ರತಿಯ ಕಳೆದು 
ಮೋದವೀವುದಕೆ ಧರೆಗಾಗಿ 
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ 
ಬಾಧಿಪ ಕೆಸರ ಬಿಡಿಸುವನೆ?	॥ 32 ॥
ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ ?
ಜನ್ಮ ಲಯವಿಲ್ಲದವನಿಗೆ ?
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ?
ಅಮ್ಮ ಇವಗೆ ಹಸಿತೃಷೆಯುಂಟೆ ?	॥ 33 ॥
ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ 
ಯೋಗಿಗಳುಂಟೆ? ಧನಧಾನ್ಯ 
ಆಗ ದೊರಕೊಂಬುದೆ? ಪಾಕ ಮಾಡುವ ವಹ್ನಿ ಮ- 
ತ್ತಾಗಲೆಲ್ಲಿಹುದು? ವಿಚಾರಿಸಿರೊ	॥ 34 ॥
ರೋಗವನೀವ ವಾತ ಪಿತ್ತ ಶ್ಲೇಷ್ಮ 
ಆಗ ಕೂಡುವುದೆ? ರಮೆಯೊಡನೆ 
ಭೋಗಿಸುವವಗೆ ದುರಿತವ ನೆನೆವರೆ?
ಈ ಗುಣನಿಧಿಗೆ ಎಣೆಯುಂಟೆ?	॥ 35 ॥
ರಮ್ಮೆದೇವಿಯರನಪ್ಪಿಕೊಂಡಿಪ್ಪುದು 
ರಮ್ಮೆಯರಸಗೆ ರತಿ ಕಾಣಿರೋ 
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ 
ಕುಮ್ಮಾರರ್ ಯಾಕೆ ಜನಿಸರು ?	॥ 36 ॥
ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ 
ಬೇಕೆಂಬ ನ್ಯಾಯವ ತಿಳಿದುಕೋ 
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ- 
ಲುಕನೆಂಬೋದು ಸಲಹಲಿಕೆ	॥ 37 ॥
ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ 
ಸಲ್ಲದು ರೋಗರುಜಿನವು 
ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲ-
ದಿಲ್ಲ ಸಮಸ್ತ ರುಜಿನವು	॥ 38 ॥
ಇಂಥಾ ಮೂರುತಿಯ ಒಳಗೊಂಬ ನರಕ ಬಹು-
ಭ್ರಾಂತ ನೀನೆಲ್ಲಿಂದ ತೋರಿಸುವೆಲೋ ? 
ಸಂತೆಯ ಮರುಳ ಹೋಗೆಲೋ ನಿನ್ನ ಮಾತ 
ಸಂತರು ಕೇಳಿ ಸೊಗಸರು	॥ 39 ॥
ಶ್ರೀನಾರಾಯಣರ ಜನನಿಜನಕರ 
ನಾನೆಂಬ ವಾದಿ ನುಡಿಯೆಲೊ 
ಜಾಣರದರಿಂದರಿಯ ಮೂಲರೂಪವ ತೋರಿ 
ಶ್ರೀನಾರಸಿಂಹನ ಅವತಾರ	 ॥ 40 ॥
ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ಎಂಬ ಶ್ರೀಹರಿಯ ಪಿತನಾರು ? 
ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವ-  
ಯಂಭುಗಳೆಲ್ಲ ಅವತಾರ	॥ 41 ॥
ದೇವಕಿಯ ಗರ್ಭದಲಿ ದೇವನವತರಿಸಿದ 
ಭಾವವನು ಬಲ್ಲ ವಿವೇಕಿಗಳು 
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ 
ಆವ ಪರಿಯಲ್ಲಿ ನುಡಿವೆಯೊ?	॥ 42 ॥
ಆವಳಿಸುವಾಗ ಯಶೋದಾದೇವಿಗೆ 
ದೇವ ತನ್ನೊಳಗೆ ಹುದುಗಿದ್ದ 
ಭುವನವೆಲ್ಲವ ತೋರಿದ್ದುದಿಲ್ಲವೆ ? 
ಆ ವಿಷ್ಣು ಗರ್ಭದೊಳಗಡಗುವನೆ ?	॥ 43 ॥
ಆನೆಯ ಮಾನದಲಿ ಅಡಗಿಸಿದವರುಂಟೆ ? 
ಅನೇಕ ಕೋಟಿ ಅಜಾಂಡವ 
ಅಣುರೋಮಕೂಪದಲಿ ಆಳ್ದ ಶ್ರೀಹರಿಯ 
ಜನನಿಜಠರವು ಒಳಗೊಂಬುದೆ	॥ 44 ॥
ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ 
ಮದನನಿವನ ಕುಮಾರನು 
ಕದನದಿ ಕಣೆಗಳ ಇವನೆದೆಗೆಸೆವನೆ ?
ಸುದತೇರಿಗಿವನೆಂತು ಸಿಲುಕುವನೆ?	॥ 45 ॥
ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ- 
ವಿದರಾದ ಬುಧರು ನುಡಿವರೆ? 
ಸದರವೆ ಈ ಮಾತು ? ಸರ್ವವೇದಂಗಳು 
ಮುದದಿಂದ ತಾವು ಸ್ತುತಿಸುವವು	॥ 46 ॥
ಎಂದ ಭಾಗವತದ ಚೆಂದದ ಮಾತನು 
ಮಂದ ಮಾನವ ಮನಸಿಗೆ 
ತಂದುಕೊ ಜಗಕೆ ಕೈವಲ್ಯವೀವ ಮು- 
ಕುಂದಗೆ ಕುಂದು ಕೊರತೆ ಸಲ್ಲ	॥ 47 ॥
ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ 
ಚಿತ್ತ ಸ್ತ್ರೀಯರಿಗೆ ಎರಗುವುದೆ ?
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ 
ಸತ್ಯಸಂಕಲ್ಪ ಬೆರೆತಿದ್ದ	॥ 48 ॥
ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ 
ಹತ್ತು ಹತ್ತೆನಿಪ ಕ್ರಮದಿಂದ 
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ?
ಅರ್ತಿಯ ಸೃಷ್ಟಿ ಹರಿಗಿದು	॥ 49 ॥
ರೋಮ ರೋಮ ಕೂಪ ಕೋಟಿವೃಕಂಗಳ 
ನಿರ್ಮಿಸಿ ಗೋಪಾಲರ ತೆರಳಿಸಿದ 
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮ- 
ಹಿಮ್ಮೆ ಬಲ್ಲವರಿಗೆ ಸಲಹಲಿಕೆ	॥ 50 ॥
ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ 
ಸಣ್ಣ ಬಾಯೊಳಗೆ ಜಗಂಗಳ 
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ 
ಘನ್ನತೆ ಬಲ್ಲವರಿಗೆ ಸಲಹಲಿಕೆ	॥ 51 ॥
ನಾರದ-ಸನಕಾದಿ ಮೊದಲಾದ ಯೋಗಿಗಳು 
ನಾರಿಯರಿಗೆ ಮರುಳಾದರೆ 
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ?
ಆರಾಧಿಸುತ್ತ ಭಜಿಸುವರೆ?	॥ 52 ॥
ಅಂಬುಜಸಂಭವ ತ್ರಿಯಂಬಕ ಮೊದಲಾದ 
ನಂಬಿದವರಿಗೆ ವರವಿತ್ತ 
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ 
ಇಂಬಿದ್ದವರಿವನ ಭಜಿಸುವರೆ?	॥ 53 ॥
ಆವನಂಗುಷ್ಠವ ತೊಳೆದ ಗಂಗಾದೇವಿ 
ಪಾವನಳೆನಿಸಿ ಮೆರೆಯಳೆ ? 
ಜೀವನ ಸೇರುವ ಪಾಪವ ಕಳೆವಳು 
ಈ ವಾಸುದೇವಗೆ ಎಣೆಯುಂಟೆ ?	॥ 54 ॥
ಕಿಲ್ಬಿಷವಿದ್ದರೆ ಅಗ್ರಪೂಜೆಯನು 
ಸರ್ಬರಾಯರ ಸಭೆಯೊಳಗೆ 
ಉಬ್ಬಿದ ಮನದಿಂದ ಧರ್ಮಜ ಮಾಡುವನೆ ?
ಕೊಬ್ಬದಿರೆಲೊ ಪರವಾದಿ	॥ 55 ॥
ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ 
ಜೀವಂತರಿಗೆ ನರಕದಲಿ 
ನೋವನೀವನೆ ನಿಮ್ಮ ಯಮದೇವನು 
ಗೋವ ನೀ ಹರಿಯ ಗುಣವರಿಯ !	॥ 56 ॥
ನರಕವಾಳುವ ಯಮಧರ್ಮರಾಯ ತನ್ನ 
ನರಜನ್ಮದೊಳಗೆ ಪೊರಳಿಸಿ 
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ?
ಕುರು ನಿನ್ನ ಕುಹಕ ಕೊಳದಲ್ಲಿ	॥ 57 ॥
ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ 
ಸುಮ್ಮನೆಯಾಗಿ ಮಲಗಿರ್ದ 
ನಮ್ಮ ನಾರಾಯಣಗೆ ಹಸಿ-ತೃಷೆ-ಜರೆ-ಮರಣ ದು- 
ಷ್ಕರ್ಮ ದುಃಖಂಗಳು ತೊಡಸುವರೆ ?	॥ 58 ॥
ರಕ್ಕಸರಸ್ತ್ರಗಳಿಂದ ಗಾಯವಡೆಯದ 
ಅಕ್ಷಯಕಾಯದ ಸಿರಿಕೃಷ್ಣ 
ತುಚ್ಛ ಯಮಭಟರ ಶಸ್ತ್ರಕಳುಕುವನಲ್ಲ 
ಹುಚ್ಚ ನೀ ಹರಿಯ ಗುಣವರಿಯ	॥ 59 ॥
ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು 
ತುಚ್ಛ ನರಕದೊಳು ಅನಲನಿಗೆ 
ಬೆಚ್ಚುವನಲ್ಲ ಅದರಿಂದಿವಗೆ ನರಕ 
ಮೆಚ್ಚುವರಲ್ಲ ಬುಧರೆಲ್ಲ	॥ 60 ॥
ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ 
ರಣರಂಗದಲ್ಲಿ ಕ್ಷಮಿಸುವನೆ 
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ 
ಮುನಿವ ಕಾಲಕ್ಕೆ ಮಹತ್ತಾಹ	॥ 61 ॥
ತಾಯ ಪೊಟ್ಟೆಯಿಂದ ಮೂಲರೂಪವ ತೋರಿ 
ಆಯುಧಸಹಿತ ಪೊರವಂಟ 
ನ್ಯಾಯಕೋವಿದರು ಪುಟ್ಟಿದನೆಂಬರೆ ?
ಬಾಯಿಗೆ ಬಂದಂತೆ ಬೊಗಳದಿರು	॥ 62 ॥
ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು 
ಇಟ್ಟ ನವರತ್ನದ ಮುಕುಟವು 
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ- 
ವಿಠ್ಠಲ ಪುಟ್ಟಿದನೆನಬಹುದೆ ?	॥ 63 ॥
ಋಷಭಹಂಸಮೇಷಮಹಿಷಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ 
ಎಸೆವ ದೇವೇಶಾನರ ಸಹಸಕ್ಕೆ ಮಣಿದರು 
ಕುಸುಮನಾಭನಿಗೆ ಸರಿಯುಂಟೆ ?	॥ 64 ॥
ಒಂದೊಂದು ಗುಣಗಳು ಇದ್ದಾವು ಇವರಲ್ಲಿ 
ಸಂದಣಿಸಿವೆ ಬಹುದೋಷ 
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು 
ಇಂದಿರೆ ಪತಿಯ ನೆನೆದಳು	॥ 65 ॥
ಇಂತು ಚಿಂತಿಸಿ ರಮೆ ಸಂತ ರಾಮನ ಪದವ 
ಸಂತೋಷಮನದಿ ನೆನೆವುತ್ತ 
ಸಂತೋಷಮನದಿ ನೆನೆವುತ್ತ ತನ್ನ ಶ್ರೀ- 
ಕಾಂತನಿದ್ದೆಡೆಗೆ ನಡೆದಳು	॥ 66 ॥
ಕಂದರ್ಪಕೋಟಿಗಳ ಗೆಲುವ ಸೌಂದರ್ಯದ 
ಚೆಂದವಾಗಿದ್ದ ಚೆಲುವನ 
ಇಂದಿರೆ ಕಂಡು ಇವನೆ ತನಗೆ ಪತಿ - 
ಯೆಂದವನ ಬಳಿಗೆ ನಡೆದಳು	॥ 67 ॥
ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ 
ಚಿತ್ತವ ಕೊಡದೆ ನಸುನಗುತ 
ಚಿತ್ತವ ಕೊಡದೆ ನಸುನಗುತ ಬಂದು ಪುರು- 
ಷೋತ್ತಮನ ಕಂಡು ನಮಿಸಿದಳು	॥ 68 ॥
ನಾನಾಕುಸುಮಗಳಿಂದ ಮಾಡಿದ ಮಾಲೆಯ 
ಶ್ರೀನಾರಿ ತನ್ನ ಕರದಲ್ಲಿ 
ಪೀನಕಂಧರದ ತ್ರಿವಿಕ್ರಮರಾಯನ ಕೊರ-
ಳಿನ ಮೇಲಿಟ್ಟು ನಮಿಸಿದಳು	॥ 69 ॥
ಉಟ್ಟ ಪೊಂಬಟ್ಟೆಯ ತೊಟ್ಟಾಭರಣಗಳು 
ಇಟ್ಟ ನವರತ್ನದ ಮುಕುಟವು 
ದುಷ್ಟಮರ್ದನನೆಂಬ ಕಡೆಯ ಪೆಂಡೆಗಳ 
ವಟ್ಟಿದ್ದ ಹರಿಗೆ ವಧುವಾದಳು	॥ 70 ॥
ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು 
ತಂಬಟೆ ಭೇರಿ ಪಟಹಗಳು 
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು 
ಅಂಬುಧಿಯ ಮನೆಯಲ್ಲೆಸೆದವು	॥ 71 ॥
ಅರ್ಘ್ಯ ಪಾದ್ಯಾಚಮನ ಮೊದಲಾದ ಷೋಡಶ- 
ನರ್ಘ್ಯ ಪೂಜೆಯಿತ್ತನಳಿಯಂಗೆ 
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು 
ಸದ್ಗತಿಯಿತ್ತು ಸಲಹೆಂದ	 ॥ 72 ॥
ವೇದೋಕ್ತಮಂತ್ರ ಪೇಳಿ ವಸಿಷ್ಠ-ನಾರದ ಮೊದ-
ಲಾದ ಮುನೀಂದ್ರರು ಮುದದಿಂದ 
ವಧೂವರರ ಮೇಲೆ ಶೋಭನದಕ್ಷತೆಯನು 
ಮೋದವೀವುತ್ತ ತಳಿದರು	॥ 73 ॥
ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು 
ತುಂಬುರು ನಾರದರು ತುತಿಸುತ್ತ 
ತುಂಬುರುನಾರದರು ತುತಿಸುತ್ತ ಪಾಡಿದರು ಪೀ- 
ತಾಂಬರಧರನ ಮಹಿಮೆಯ	॥ 74 ॥
ದೇವನಾರಿಯರೆಲ್ಲ ಬಂದೊದಗಿ ಪಾಠಕರು 
ಓವಿ ಪಾಡುತ್ತ ಕುಣಿದರು 
ದೇವತರುವಿನ ಹೂವಿನ ಮಳೆಗಳ 
ಶ್ರೀವರನ ಮೇಲೆ ಕರೆದರು	॥ 75 ॥
ಮುತ್ತುರತ್ನಗಳಿಂದ ತೆತ್ತಿಸಿದ ಹಸೆಯ ನವ- 
ರತ್ನಮಂಟಪದಿ ಪಸರಿಸಿ ನವ- 
ರತ್ನಮಂಟಪದಿ ಪಸರಿಸಿ ಕೃಷ್ಣನ 
ಮುತ್ತೈದೆಯರೆಲ್ಲ ಕರೆದರು	॥ 76 ॥
ಶೇಷಶಯನನೆ ಬಾ ದೋಷದೂರನೆ ಬಾ 
ಭಾಸುರಕಾಯ ಹರಿಯೆ ಬಾ 
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ- 
ಲಾಸದಿಂದೆಮ್ಮ ಹಸೆಗೆ ಬಾ	॥ 77 ॥
ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ 
ಕುಂಜರವರದಾಯಕನೆ ಬಾ 
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ- 
ರಂಜನ ನಮ್ಮ ಹಸೆಗೆ ಬಾ	॥ 78 ॥
ಆದಿಕಾಲದಲ್ಲಿ ಆಲದೆಲೆಯ ಮೇಲೆ 
ಶ್ರೀದೇವಿಯರೊಡನೆ ಪವಡಿಸಿದ 
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ 
ಮೋದದಿಂದೆಮ್ಮ ಹಸೆಗೆ ಬಾ	॥ 79 ॥
ಆದಿಕಾರಣನಾಗಿ ಆಗ ಮಲಗಿದ್ದು 
ಮೋದ ಜೀವರ ತನ್ನ ಉದರದಲಿ 
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ- 
ನಾದಿಮೂರುತಿಯೆ ಹಸೆಗೆ ಬಾ	॥ 80 ॥
ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ- 
ತಿರ್ಮಯವಾದ ಪದ್ಮದಲ್ಲಿ 
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ 
ನಮ್ಮ ಮನೆಯ ಹಸೆಗೆ ಬಾ	॥ 81 ॥
ನಾನಾವತಾರದಲಿ ನಂಬಿದ ಸುರರಿಗೆ 
ಆನಂದವೀವ ಕರುಣಿ ಬಾ 
ಆನಂದವೀವ ಕರುಣಿ ಬಾ ಶ್ರೀಕೃಷ್ಣ 
ಶ್ರೀನಾರಿಯರೊಡನೆ ಹಸೆಗೆ ಬಾ	॥ 82 ॥
ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು 
ಒಮ್ಮನದಿ ನೇಹವ ಮಾಡುವ 
ನಿರ್ಮಲಪೂಜೆಯ ಕೈಗೊಂಡ ಶ್ರೀಕೃಷ್ಣ ಪರ- 
ಬೊಮ್ಮಮೂರುತಿಯೆ ಹಸೆಗೆ ಬಾ	॥ 83 ॥
ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗ- 
ಲಿಕ್ಕಿ ಬಡಿಸಿದ ರಸಾಯನವ 
ಸಕ್ಕರೆಗೂಡಿದ ಪಾಯಸ ಸವಿಯುವ 
ರಕ್ಕಸವೈರಿಯೆ ಹಸೆಗೆ ಬಾ	॥ 84 ॥
ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು 
ಭದ್ರಮಂಟಪದಿ ಕುಳ್ಳಿರಿಸಿ 
ಸ್ವಾದ್ವನ್ನಗಳನು ಬಡಿಸಲು ಕೈಗೊಂಬ 
ಮುದ್ದು ನರಸಿಂಹ ಹಸೆಗೆ ಬಾ	॥ 85 ॥
ಗರುಡನ ಮೇಲೇರಿ ಗಗನಮಾರ್ಗದಲ್ಲಿ 
ತರತರದಿ ಸ್ತುತಿಪ ಸುರಸ್ತ್ರೀಯರ 
ಮೆರೆವ ಗಂಧರ್ವರ ಗಾನವ ಸವಿಯುವ 
ನರಹರಿ ನಮ್ಮ ಹಸೆಗೆ ಬಾ	॥ 86 ॥
ನಿಮ್ಮಣ್ಣನ ಮನೆಯ ಸುಧರ್ಮಸಭೆಯಲ್ಲಿ 
ಉಮ್ಮೆಯರಸ ನಮಿಸಿದ 
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ- 
ರಮ್ಮ ಮೂರುತಿಯೆ ಹಸೆಗೆ ಬಾ	॥ 87 ॥
ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು 
ಅಂದದ ಪೂಜೆಯ ಕೈಗೊಂಡು 
ಅಂದದ ಪೂಜೆಯ ಕೈಗೊಂಡು ಸುರತರುವ 
ಇಂದಿರೆಗಿತ್ತ ಹರಿಯೆ ಬಾ	॥ 88 ॥
ನಿಮ್ಮ ನೆನೆವ ಮುನಿಹೃದಯದಲಿ ನೆಲಸಿದ 
ಧರ್ಮರಕ್ಷಕನೆನಿಸುವ 
ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿ-
ಸ್ಸೀಮಮಹಿಮ ಹಸೆಗೆ ಬಾ	॥ 89 ॥
ಮುತ್ತಿನ ಸತ್ತಿಗೆ ನವರತ್ನದ ಚಾಮರ 
ಸುತ್ತ ನಲಿವ ಸುರಸ್ತ್ರೀಯರ 
ನೃತ್ಯವ ನೋಡುವ ಚಿತ್ರವಾದ್ಯಂಗಳ ಸಂ- 
ಪತ್ತಿನ ಹರಿಯೆ ಹಸೆಗೆ ಬಾ	॥ 90 ॥
ಎನಲು ನಗುತ ಬಂದು ಹಸೆಯ ಮೇಲೆ 
ವನಿತೆ ಲಕ್ಷುಮಿಯೊಡಗೂಡಿ 
ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು 
ದಿನದುತ್ಸವವ ನಡೆಸಿದರು	॥ 91 ॥
ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ- 
ರತ್ತಿ ಮೊದಲಾದ ಸುರಸ್ತ್ರೀಯರು 
ಮುತ್ತಿನಾಕ್ಷತೆಯನು ಶೋಭನವೆನುತ ತ- 
ಮ್ಮರ್ತಿಯಳಿಯಗೆ ತಳಿದರು	॥ 92 ॥
ರತ್ನದಾರತಿಗೆ ಸುತ್ತಮುತ್ತನೆ ತುಂಬಿ 
ಮುತ್ತೈದೆಯರೆಲ್ಲ ಧವಳದ 
ಮುತ್ತೈದೆಯರೆಲ್ಲ ಧವಳದ ಪದನ ಪಾ- 
ಡುತ್ತಲೆತ್ತಿದರೆ ಸಿರಿವರಗೆ	॥ 93 ॥
ಬೊಮ್ಮ ತನ್ನರಸಿ ಕೂಡೆ ಬಂದೆರಗಿದ 
ಉಮ್ಮೆಯರಸ ನಮಿಸಿದ 
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ 
ರಮ್ಮೆಯರಸಗೆ ಸಲಿಸಿದರು	॥ 94 ॥
ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ 
ಮುಕ್ತಸುರರು ಮುದದಿಂದ 
ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ 
ಮಸ್ತಕಮಣಿಯ ಶಿವನಿತ್ತ	॥ 95 ॥
ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ- 
ದನ್ನದಲ್ಲಿದ್ದಗ್ನಿ ಕೆಡದಂತೆ 
ವಹ್ನಿಪ್ರತಿಷ್ಠೆಯ ಮಾಡಿ ಅವನೊಳಗಿದ್ದ 
ತನ್ನಾಹುತಿಯಿತ್ತ ಸುರರಿಗೆ	॥ 96 ॥
ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ 
ಉಬ್ಬಿದ ಹರುಷದಿ ಉಣಿಸಲು 
ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು 
ಸರ್ಬರಿಗೆಡೆಯ ಮಾಡಿಸಿದ	॥ 97 ॥
ಮಾವನ ಮನೆಯಲ್ಲಿ ದೇವರಿಗೌತಣವ ದಾ- 
ನವರು ಕೆಡಿಸದೆ ಬಿಡರೆಂದು ದಾ- 
ನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ 
ದೇವ ಸ್ತ್ರೀವೇಷವ ಧರಿಸಿದ	॥ 98 ॥
ತನ್ನ ಸೌಂದರ್ಯದಿಂದನ್ನಂತಮಡಿಯಾದ ಲಾ- 
ವಣ್ಯದಿ ಮೆರೆವ ನಿಜಪತಿಯ 
ಹೆಣ್ಣುರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ- 
ಗನ್ಯರೇಕೆಂದು ಬೆರಗಾದಳು	॥ 99 ॥
ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ 
ಭಾವುಕರೆಲ್ಲ ಮರುಳಾಗೆ 
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ 
ಸೇವಕ ಸುರರಿಗುಣಿಸಿದ	॥ 100 ॥
ನಾಗನ ಮೇಲೆ ತಾ ಮಲಗಿದ್ದಾಗ 
ಆಗಲೆ ಜಗವ ಜತನದಿ 
ಆಗಲೆ ಜಗವ ಜತನದಿ ಧರಿಸೆಂದು 
ನಾಗಬಲಿಯ ನಡೆಸಿದ	॥ 101 ॥
ಕ್ಷುಧೆಯ ಕಳೆವ ನವರತ್ನದ ಮಾಲೆಯ 
ಮುದದಿಂದ ವಾರಿಧಿ ವಿಧಿಗಿತ್ತ 
ಚದುರಹಾರವ ವಾಯುದೇವರಿಗಿತ್ತ 
ವಿಧುವಿನ ಕಲೆಯ ಶಿವಗಿತ್ತ	॥ 102 ॥
ಶಕ್ರ ಮೊದಲಾದ ದಿಕ್ಪಾಲಕರಿಗೆ 
ಸೊಕ್ಕಿದ ಚೌದಂತ ಗಜಂಗಳ 
ಉಕ್ಕಿದ ಮನದಿಂದ ಕೊಟ್ಟ ವರುಣ ಮದು- 
ಮಕ್ಕಳಾಯುಷ್ಯವ ಬೆಳೆಸೆಂದ	॥ 103 ॥
ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ 
ಚಿತ್ತವ ಸೆಳೆವಪ್ಸರಸ್ತ್ರೀಯರ 
ಹತ್ತು ಸಾವಿರ ಕೊಟ್ಟ ವರುಣದೇವ ಹರಿ- 
ಭಕ್ತಿಯ ಮನದಿ ಬೆಳೆಸೆಂದ	॥ 104 ॥
ಪೊಳೆವ ನವರತ್ನದ ರಾಶಿಯ ತೆಗೆತೆಗೆದು 
ಉಳಿದ ಅಮರರಿಗೆ ಸಲಿಸಿದ 
ಉಳಿದ ಅಮರರಿಗೆ ಸಲಿಸಿದ ಸಮುದ್ರ 
ಕಳುಹಿದನವರವರ ಮನೆಗಳಿಗೆ 	॥ 105 ॥
ಉನ್ನಂತ ನವರತ್ನಮಯವಾದ ಅರಮನೆಯ 
ಚೆನ್ನೇಮಗಳಿಂದ ವಿರಚಿಸಿ 
ತನ್ನ ಅಳಿಯಗೆ ಸ್ಥಿರವಾಗಿ ಮಾಡಿಕೊಟ್ಟು 
ಇನ್ನೊಂದು ಕಡೆಯಡಿ ಇಡದಂತೆ	॥ 106 ॥
ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ 
ಜಯವಿತ್ತ ಕ್ಷೀರಾಂಬುಧಿಯಲ್ಲಿ 
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ 
ದಯದಿ ನಮ್ಮೆಲ್ಲರ ಸಲಹಲಿ 	॥ 107 ॥
ಈ ಪದನ ಮಾಡಿದ ವಾದಿರಾಜೇಂದ್ರಮುನಿಗೆ 
ಶ್ರೀಪತಿಯಾದ ಹಯವದನ 
ತಾಪವ ಕಳೆದು ತನ್ನ ಶ್ರೀಚರಣ ಸ- 
ಮೀಪದಲ್ಲಿಟ್ಟು ಸಲಹಲಿ	॥ 108 ॥
ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ-
ಕಾಂತನ ಕಂದನೆನಿಸುವ 
ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿ 
ಪಂಥದಿ ಪೇಳಿದ ಪದವಿದು	॥ 109 ॥
ಶ್ರೀಯರಸ ಹಯವದನಪ್ರಿಯ ವಾದಿರಾಜ- 
ರಾಯ ರಚಿಸಿದ ಪದವಿದು 
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿ- 
ರಾಯಾಸದಿಂದ ಸುಖಿಪರು	॥ 110 ॥
ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ 
ಕ್ರಮ್ಮದಿ ಮಾಡಿ ವಿನೋದಿಸುವ 
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸು-
ರಮ್ಮೋಹನವೆ ನರನಟನೆ	॥ 111 ॥
ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ 
ಮದುಮಕ್ಕಳಿಗೆ ಮುದವಹುದು 
ವಧುಗಳಿಗೆ ವಾಲೆಭಾಗ್ಯ ದಿನದಿನಕೆ ಹೆಚ್ಚುವುದು 
ಮದನನಯ್ಯನ ಕೃಪೆಯಿಂದ	॥ 112 ॥
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ 
ಶೋಭಾನವೆನ್ನಿ ಸುಗುಣನಿಗೆ 
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ 
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥	॥ 113 ॥
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ 
ಶೋಭಾನವೆನ್ನಿ ಸುಗುಣನಿಗೆ 
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ 
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥	॥ ಪ ॥
ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ 
ಕಡೆಗೋಲು ನೇಣ ಪಿಡಿದನೆ ॥
ಕಡಗೋಲು ನೇಣ ಪಿಡಿದನೆ ದೇವಕಿಯ 
ತನಯಗಾರುತಿಯ ಬೆಳಗಿರೆ	॥ ಶೋಭಾನೆ ॥
ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ 
ಕಾಂತೆ ಲಕ್ಷ್ಮಿಯ ಅರಸನೆ ॥
ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ 
ಕಾಂಚನದಾರತಿಯ ಬೆಳಗಿರೆ	॥ ಶೋಭಾನೆ ॥
ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ 
ಮುದ್ದು ರುಕ್ಮಿಣಿಯರಸನೆ ॥
ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ 
ಮುತ್ತಿನಾರತಿಯ ಬೆಳಗಿರೆ	॥ ಶೋಭಾನೆ ॥
ಪಾಂಡವರ ಪ್ರಿಯನೆ ಚಾಣೂರಮರ್ದನನೆ 
ಸತ್ಯಭಾಮೆಯ ಅರಸನೆ ॥
ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ 
ನವರತ್ನದಾರತಿಯ ಬೆಳಗಿರೆ	॥ ಶೋಭಾನೆ ॥
ಸೋದರ ಮಾವನ ಮಧುರೆಲಿ ಮಡುಹಿದ 
ತಾಯಿಯ ಸೆರೆಯ ಬಿಡಿಸಿದ ॥
ತಾಯಿಯ ಸೆರೆಯ ಬಿಡಿಸಿದ ಹಯವದನ 
ದೇವಗಾರತಿಯ ಬೆಳಗಿರೆ	॥ ಶೋಭಾನೆ ॥
ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ 
ಹತ್ತಾವತಾರದ ಹಯವದನಗ 
ಹತ್ತಾವತಾರದ ಹಯವದನ ದೇವಗ 
ಹೊಸ ಮುತ್ತಿನಾರುತಿಯ ಬೆಳಗಿರೆ	॥ ಶೋಭಾನೆ ॥